ಪುನರ್ಜನ್ಮ ಪಡೆದ ‘ಯಕ್ಷ ಚಂದ್ರಿಕೆ’: ಮಂದಾರ್ತಿ ರಥೋತ್ಸವದಲ್ಲಿ ಮತ್ತೆ ಗೆಜ್ಜೆ ಕಟ್ಟಿದ ಶಶಿಕಾಂತ್ ಶೆಟ್ಟಿ!

ಮಂದಾರ್ತಿ: ಮಂದಾರ್ತಿ ರಥೋತ್ಸವಕ್ಕೆ ಬಂದವರಿಗೆ ಎರಡೆರಡು ಸಂಭ್ರಮ. ತಾಯಿ ಮಂದಾರ್ತಿ ಮಾತೆ ರಥೋತ್ಸವ ಮುಗಿಸಿ ದೇವಸ್ಥಾನಕ್ಕೆ ಬರುವಾಗ ವಸಂತ ಮಂಟಪದಲ್ಲಿ ವಿವಿಧ ಸೇವೆ ಜರುಗುವುದು ವಾಡಿಕೆ.
ಯಕ್ಷಗಾನ ಪ್ರಿಯೆ ಮಂದಾರ್ತಿ ಮಾತೆಗೆ 5 ಮೇಳಗಳ ಆಯ್ದ ಕಲಾವಿದರರು ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಸೇವೆ ಮಾಡುತ್ತಾರೆ.

ಮಂದಾರ್ತಿ ಕ್ಷೇತ್ರ ಮಹಾತ್ಮೆಯಲ್ಲಿ ಐವರು ನಾಗಕನ್ಯೆಯರ ಕಥೆ ಸರ್ವರಿಗೂ ತಿಳಿದದ್ದೇ. ಹಾಗೆಯೇ ಶನಿವಾರ ನಡೆದ ರಥೋತ್ಸವದ ಪ್ರಯುಕ್ತ ನಡೆದ ಸೇವೆಗೆ ಐವರು ನಾಗಕನ್ಯೆಯರ ಸ್ತ್ರೀ ವೇಷದಲ್ಲಿ, ಶಶಿಕಾಂತ್ ಶೆಟ್ಟಿಯವರು ಒಬ್ಬರಾಗಿ ಸೇವೆಗೈದರು.
2 ದಶಕದಿಂದ ಶ್ರೀ ಗುರುಪ್ರಸದಿತಾ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಯಕ್ಷಗಾನದ ಪಾರಂಪರಿಕ ಹೆಜ್ಜೆ ಮತ್ತು ಪೌರಾಣಿಕ ಪ್ರಸಂಗದಲ್ಲಿ ಧರ್ಮದ ಮೂಲ ಕಥೆಗಳ ಅಪಾರ ಅನುಭವದ ಮಾತಿನಿಂದ ಲಕ್ಷಾಂತರ ಯಕ್ಷಗಾನ ಪ್ರೇಮಿಗಳ ಮನ ಸೂರೆಗೊಂಡಿದ್ದರು.
ಕಳೆದ ತಿರುಗಾಟದಲ್ಲಿ ಮೇಳದ ಒಳ ರಾಜಕೀಯದಿಂದ ಬೇಸತ್ತು, ಈ ವರ್ಷದ ತೀರುಗಾಟದಲ್ಲಿ ಸಾಲಿಗ್ರಾಮ ಮೇಳದಲ್ಲಿ ಬಣ್ಣ ಹಚ್ಚುವುದಿಲ್ಲ ಎನ್ನುವ ಅವರದೇ ವಿಡಿಯೋ ಅಭಿಮಾನಿಗಳಲ್ಲಿ ಗೊಂದಲ ಗೊಳಿಸಿತು. ಆದರೆ ಅತಿಥಿಯಾಗಿ ನನ್ನ ಯಕ್ಷಗಾನ ಕಲಾ ಸೇವೆ ಮುಂದುವರಿಯಲಿದೆ ಎಂದಿದ್ದರು.
ಈ ಎಲ್ಲಾ ಗೊಂದಲದ ನಡುವೆ ಕಳೆದ ಮಳೆಗಾಲದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚು ಕಡಿಮೆ ಶಶಿಕಾಂತ್ ಶೆಟ್ಟಿ ವಿಧಿವಶರಾದರೂ ಎನ್ನುವ ಮಟ್ಟದಲ್ಲಿ ಸುದ್ದಿ ಹಬ್ಬಿಕೊಂಡಿತ್ತು. ಆ ಮಟ್ಟದ ಅನಾರೋಗ್ಯ ಅವರನ್ನು ಆಸ್ಪತ್ರೆಯಲ್ಲಿ ನಿಶ್ಚಲ ಸ್ಥಿತಿಯಲ್ಲಿರೀಸಿತ್ತು.
ಅದೆಷ್ಟೋ ಮಂದಿ ಅವರ ಉಳಿವಿಗಾಗಿ ಪ್ರಾರ್ಥನೆ ಹರಕೆ ಸಲ್ಲಿಸಿದ್ದರು. ಅಭಿಮಾನಿಗಳ ಪ್ರಾರ್ಥನೆಗೆ ಫಲ ಎನ್ನುವಂತೆ ಶಶಿಕಾಂತ ಶೆಟ್ಟಿ ಅವರು ನಿಧಾನವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡು ಮನೆಗೆ ಹಿಂದಿರುಗಿದರು. ಮನೆಯಲ್ಲಿ ಕೂಡ ಯಾರನ್ನು ಭೇಟಿ ಮಾಡಬಾರದ ಮಟ್ಟದಲ್ಲಿ ಕಡ್ಡಾಯ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು.
ಇದೀಗ ಮಂದಾರ್ತಿ ರಥೋತ್ಸವದಂದು ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ ಮತ್ತೆ ಯಕ್ಷಗಾನ ಸೇವೆಗೆ ತಾಯಿ ಮಂದಾರ್ತಿಯ ಅನುಗ್ರಹದ ಬೇಡಿಕೆ ಸಲ್ಲಿಸಿದ್ದಾರೆ.
ಯಕ್ಷ ಚಂದ್ರಿಕೆ ಶಶಿಕಾಂತ್ ಶೆಟ್ಟಿಯವರು ಮತ್ತೆ ಯಕ್ಷಗಾನ ಕಲಾ ಸೇವೆ ಮಾಡಲು ಅರೋಗ್ಯವನ್ನು ಸರ್ವ ದೇವರು ಕರುಣಿಸಲಿ ಎಂದು ಅಭಿಮಾನಿಗಳ ಆಶಯ.





