ಆಶಕ್ತರ ನೆರವಿಗೆ ಯಕ್ಷಗಾನ: ಸಾಲಿಗ್ರಾಮದಲ್ಲಿ ಮಾನವೀಯ ಸೇವೆಯ ಮಹತ್ವದ ಹೆಜ್ಜೆ

ಸಾಲಿಗ್ರಾಮ: ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳನ್ನು ಒತ್ತಿಹೇಳುವ ಉದ್ದೇಶದಿಂದ, ಆಶಕ್ತರ ಸಹಾಯಾರ್ಥ ವಿಶೇಷ ಯಕ್ಷಗಾನ ಪ್ರದರ್ಶನವನ್ನು ಮಾರ್ಚ್ 21ರಂದು ಶನಿವಾರ ರಾತ್ರಿ 9:30ಕ್ಕೆ ಸಾಲಿಗ್ರಾಮದ ನ್ಯೂ ಕಾರ್ಕಡ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ.

ಯಕ್ಷ ಕಾಂತರ ಹಾಗೂ ಯಕ್ಷಬ್ರಹ್ಮಶ್ರೀ ಅವರ ಸಂಯೋಜನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಮಹಿಷಮರ್ದಿನಿ ದಶವತಾರ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಸಂಗಮದಲ್ಲಿ “ನೀಲಾವರ ಕಲ್ಲು ರಾಶಿ ಕಲ್ಕುಡ ಮಹಾತ್ಮೆ” ಎಂಬ ಕರಾವಳಿ ದೈವ ಶಕ್ತಿಯ ಕಥಾ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿ, ಕಾರ್ಕಡದ ದಿನೇಶ್ ಎಂಬ ದಿನಕೂಲಿ ಕಾರ್ಮಿಕರ ಚಿಕಿತ್ಸೆಗೆ ನೆರವು ಸಂಗ್ರಹಿಸುವುದಾಗಿದೆ. ಗಂಭೀರ ಅನಾರೋಗ್ಯದಿಂದ ಹಾಸಿಗೆಯಲ್ಲಿರುವ ದಿನೇಶ್ ಅವರ ಕುಟುಂಬ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇಬ್ಬರು ಅಲ್ಪವಯಸ್ಕ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ವೃದ್ಧ ತಾಯಿಯ ಆರೈಕೆ ಹೊಣೆಗಾರಿಕೆ ಕುಟುಂಬದ ಮೇಲೆ ಭಾರವಾಗಿದೆ. ಕೂಲಿ ಕೆಲಸದಿಂದ ಬದುಕು ಸಾಗಿಸುತ್ತಿದ್ದ ಪತ್ನಿಗೆ ಈಗ ಗಂಡನ ಚಿಕಿತ್ಸೆ ಮತ್ತು ಮನೆಯ ಎಲ್ಲಾ ಜವಾಬ್ದಾರಿಗಳು ಒಂದೇ ಸಮಯದಲ್ಲಿ ಎದುರಾಗಿವೆ. ವಾರಂವಾರ ಹೆಚ್ಚುತ್ತಿರುವ ಔಷಧ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ಕಷ್ಟಕರವಾಗಿದೆ.


ಇನ್ನೊಂದು ಉದ್ದೇಶವಾಗಿ, ಕಾರ್ಕಡದ ಭಟ್ಟರಕಟ್ಟೆ ನಿವಾಸಿ ಜ್ಯೋತಿ ವಿಕ್ಟೋರಿಯಾ ಡಿಸಿಲ್ವ ಅವರ ಕುಟುಂಬಕ್ಕೆ ನೆರವು ನೀಡುವುದು ಒಳಗೊಂಡಿದೆ. ಅತೀ ದುಸ್ಥಿತಿಯಲ್ಲಿರುವ ಅವರ ಮನೆ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕವಿದೆ. ಅನಾರೋಗ್ಯ ಪೀಡಿತ ಗಂಡ ಮತ್ತು ಶಾಲೆಗೆ ಹೋಗುವ ಮಕ್ಕಳ ಖರ್ಚುಗಳಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ.
ಈ ಹಿನ್ನೆಲೆ, ದಿನೇಶ್ ಅವರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಜ್ಯೋತಿ ವಿಕ್ಟೋರಿಯಾ ಡಿಸಿಲ್ವ ಅವರ ಮನೆ ನಿರ್ಮಾಣ ಸಹಾಯಾರ್ಥ ಈ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕರು ತಿಳಿಸಿದ್ದಾರೆ.
ಸಹಾಯ ಹಸ್ತ ನೀಡಲು ಇಚ್ಛಿಸುವ ಸಾರ್ವಜನಿಕರು ಸ್ಥಳದಲ್ಲಿಯೇ ಅಥವಾ ಕ್ಯೂಆರ್ ಕೋಡ್ ಮೂಲಕ ದೇಣಿಗೆ ನೀಡಬಹುದು ಎಂದು ತಿಳಿಸಿದ್ದಾರೆ.





