“ಹಣಕ್ಕಿಂತ ಮನಸ್ಸು ದೊಡ್ಡದು”: ಸಾಲಿಗ್ರಾಮದಲ್ಲಿ ಯಕ್ಷಗಾನದ ಮೂಲಕ ಮಾನವೀಯ ಸೇವೆ – ಆಶಕ್ತರಿಗೆ ಮನೆ, ರೋಗಿಗಳಿಗೆ ಧನಸಹಾಯ

ಸಾಲಿಗ್ರಾಮ: ದಾನ ಅಥವಾ ಸಹಾಯ ಮಾಡಲು ಹಣಕ್ಕಿಂತ ಮನಸ್ಸು ದೊಡ್ಡದು ಎನ್ನುವುದನ್ನು ಸತೀಶ್ ಕಾರ್ಕಡ ಮತ್ತು ಇವರ ತಂಡ ರುಜುವಾತು ಪಡಿಸಿ ತೋರಿಸಿದ್ದಾರೆ.

ಸಾಲಿಗ್ರಾಮದ ಕಾರ್ಕಡ ಭಟ್ಟರಕಟ್ಟೆಯ ಜ್ಯೋತಿ ವಿಕ್ಟೊರಿಯಾ ಲೂಹಿಸ್ ದಂಪತಿಗಳು ಶಿಥಿಲಗೊಂಡ ಮನೆಯಲ್ಲಿ ವಾಸಿಸುತ್ತಿದ್ದುದನ್ನು ಮತ್ತು ಸ್ಥಳೀಯ ವ್ಯಕ್ತಿ ದಿನೇಶ್ ಕಾರ್ಕಡ ಇವರು ಅನಾರೋಗ್ಯದಿಂದ ಬಳಲುತ್ತಿರುವುದನ್ನು ಕಂಡು ಮರಗಿದ ಸತೀಶ್ ಮತ್ತು ಅವರ ತಂಡದ ಶ್ರೀನಿವಾಸ ಕಾರ್ಕಡ, ಸಂತೋಷ ಕಾರ್ಕಡ, ಶಿಶಿರ ಕಾರ್ಕಡ, ರಮೇಶ್ ಕಾರ್ಕಡ ಇವರುಗಳು ನೀಲಾವರ ಮೇಳದ ಯಕ್ಷಗಾನ ಆಯೋಜನೆ ಮಾಡಿ ಹಣ ಸಂಗ್ರಹಣೆ ಮಾಡಿದರು.
ಆರ್ಥಿಕವಾಗಿ ಈ ತಂಡದ ಸದಸ್ಯರು ಬಲಾಢ್ಯರಲ್ಲ. ಆದರೂ ಕೂಡ ಕಷ್ಟ ಎಂದಾಗ ಮಿಡಿಯುವ ಹೃದಯ ಶ್ರೀಮಂತಿಕೆ ಇವರಲ್ಲಿದೆ. ಒಂದಷ್ಟು ದಿನ ತಮ್ಮ ದಿನದ ವೃತ್ತಿಗೆ ರಜೆ ಪಡೆದು, ಯಕ್ಷಗಾನ ಹೆಸರಲ್ಲಿ ಹಣ ಸಂಗ್ರಸಿ ಉಳಿದ 50 ಸಾವಿರ ರೂಪಾಯಿಯಲ್ಲಿ ತಲಾ 2 ಕುಟುಂಬಕ್ಕೆ 25 ಸಾವಿರ ರೂಪಾಯಿಯಂತೆ ನೀಡಿದ್ದಾರೆ. ಇಂತಹ ಮಾನವೀಯ ಸೇವೆ ಮಾಡುವ ಮನಸ್ಸುಗಳು ಒಂದಾದರೆ ,ಸಮಾಜದಲ್ಲಿ ಸಹಜೀವನ ಪದ್ಧತಿಗೆ ಬೆಲೆ ಹೆಚ್ಚಾಗಲಿದೆ.
ಇವರೊಂದಿಗೆ ಯಕ್ಷ ಬ್ರಹ್ಮಶ್ರೀ ತಂಡದವರು ಕೂಡ ಕೈ ಜೋಡಿಸಿ ಸಹಕಾರ ನೀಡಿದ್ದಾರೆ.
ಯುವಕರ ಈ ಪ್ರಯತ್ನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





