ಮಂದಾರ್ತಿ: ಕಾಡಿ ಬೇಡುವುದು ಚಿಲ್ಲರೆ ಹಣ. ದಾನವಾಗಿ ನೀಡುವುದು ಲಕ್ಷ ಲಕ್ಷ. ಇದು ಅಶ್ವಥಮ್ಮನ ಉದಾರತೆ

ಮಂದಾರ್ತಿ : ಭಿಕ್ಷೆ ಬೇಡಿದ ಹಣದಲ್ಲಿ ಶ್ರೀ ಮಂದಾರ್ತಿ ಕ್ಷೇತ್ರದಲ್ಲಿ,ಅನ್ನದಾನ ಮತ್ತು ವಸ್ತ್ರದಾನ ಮಾಡಲು ಮಹಿಳೆಯೋರ್ವರು ಸಂಕಲ್ಪ ಮಾಡಿದ್ದಾರೆ.
ಇವರ ಹೆಸರು ಅಶ್ವಥಮ್ಮ. ವಯಸ್ಸು ಸಾರಾಸರಿ 70.ಗಂಗೊಳ್ಳಿಯ ಕಂಚುಗೋಡು ಇವರ ಊರು. ಆದರೆ ಮೂಲತಃ ಕಂಚುಗೋಡಿನವರು ಅಲ್ಲ. ಆಂಧ್ರ ಮೂಲದಿಂದ ವಲಸೆ ಬಂದ ರಂಗಭೂಮಿ ಕಲಾವಿದರ ಗುಂಪಿನವರು. ಕಾರಣಾಂತರಗಳಿಂದ ಕಂಚುಗೊಂಡಿನಲ್ಲಿ ಉಳಿದು ಬಿಡುತ್ತಾರೆ. ಮಕ್ಕಳು ಇಲ್ಲದಿದ್ದರೂ ಮೂವರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಓದಿಸಿ ಮದುವೆ ಮಾಡಿ ಸಂಸಾರದ ನೌಕೆಯಲ್ಲಿ ತೇಲಿ ಬಿಟ್ಟಿದ್ದಾರೆ.
ಹಲವಾರು ವರ್ಷದಿಂದ ಕೆಲವು ದೇವಸ್ಥಾನದ ಮುಂದೆ ಅಮ್ಮ ತಾಯಿ ಅಂತ ಭಕ್ತರ ಮೂಲಕ ಚಿಲ್ಲರೆ ಹಣ ಸಂಗ್ರಹಣೆ ಮಾಡುತ್ತಾರೆ.ರಾತ್ರಿ ಸಮಯ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಒಂದು ನಿರ್ದಿಷ್ಟ ಜಾಗದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ವರ್ಷಕ್ಕೊಮ್ಮೆ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ದಿನಕ್ಕೊಂದು ದೇವಸ್ಥಾನದ ಮುಂದೆ ಕುಳಿತು ಹಣ ಸಂಗ್ರಹಣೆ ಆದಮೇಲೆ ತನ್ನ ಊರಿಗೆ ತೆರಳಿ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆಗೆ ಕಾಲ ಕಳೆದು ಬರುತ್ತಾರೆ.
ತಾನು ಸಂಗ್ರಹಣೆ ಮಾಡಿದ ಹಣವನ್ನು ದೇವಾಲಯಗಳಲ್ಲಿ ನಡೆಯುವ ಅನ್ನದಾನಕ್ಕೆ ದೇಣಿಗೆ ನೀಡುವುದೇ ಇವರಿಗೆ ಇರುವ ಆಸಕ್ತಿ.
ಈ ಆಶಯಂದಂತೆ ಇದೇ ಬರುವ ಏಪ್ರಿಲ್ 29ರ ಬುದುವಾರ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅನ್ನದಾನ ಮತ್ತು ವಸ್ತ್ರದಾನ ಮಾಡಲು ಸಂಕಲ್ಪ ಮಾಡಿರುತ್ತಾರೆ.
ಇವರು ಈ ಮೊದಲು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಒಂದೂವರೆ ಲಕ್ಷ, ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಒಂದು ಲಕ್ಷ. ಶಬರಿಮಲೆ ಪಂಪಾ ಕ್ಷೇತ್ರದಲ್ಲಿ ಅನ್ನದಾನ, ಕಂಚುಗೋಡು ದೇವಸ್ಥಾನಕ್ಕೂ ಒಂದು ಲಕ್ಷ ನೀಡಿರುತ್ತಾರೆ.





