
ಸಿದ್ದಾಪುರ ಏತ ನೀರಾವರಿ ಯೋಜನೆಗೆ ತಡೆ ಖಂಡನೆ: ಪಕ್ಷಾತೀತವಾಗಿ ರೈತರಿಂದ ಭಾರೀ ಪ್ರತಿಭಟನೆ
ಸಿದ್ದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ತಡೆ ನೀಡಿರುವುದನ್ನು ಖಂಡಿಸಿ ರೈತ ಸಂಘ ಉಡುಪಿ ಹಾಗೂ ಸುತ್ತಮುತ್ತಲಿನ ಎಂಟು ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಬುಧವಾರ ಸಿದ್ದಾಪುರ ಪೇಟೆಯಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ಸರ್ಕಾರದ ಮಾಜಿ ಸಭಾಪತಿಗಳು ಹಾಗೂ ರೈತ ಸಂಘ ಉಡುಪಿ ಅಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ನಾವು ರೈತರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಇಲ್ಲಿ ಯಾವುದೇ ಪಕ್ಷದ ಪರ ಅಥವಾ ವಿರುದ್ಧ ಎಂಬ ಪ್ರಶ್ನೆಯೇ ಇಲ್ಲ. ಈ ವಿಚಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಕೆಲವು ಗುತ್ತಿಗೆದಾರರು ಸಮುದಾಯದ ಹೆಸರನ್ನು ಬಳಸಿಕೊಂಡು ಗುತ್ತಿಗೆ ಪಡೆದುಕೊಳ್ಳುತ್ತಿರುವುದು ಸರಿಯಲ್ಲ. ಸಮುದಾಯದ ಅಭಿವೃದ್ಧಿ ಒಳ್ಳೆಯದು, ಆದರೆ ಸಮುದಾಯವನ್ನು ಮುಂದಿಟ್ಟು ವ್ಯವಹಾರ ಮಾಡುವುದು ತಪ್ಪು. ಈ ಹೋರಾಟದಲ್ಲಿ ವೈಯಕ್ತಿಕ ಅಥವಾ ರಾಜಕೀಯ ಉದ್ದೇಶ ಇಲ್ಲ. ರೈತರ ನೀರಿನ ಹಕ್ಕಿಗಾಗಿ ಮುಂದಿನ ದಿನಗಳಲ್ಲಿ ಅಂತಿಮ ಹೋರಾಟಕ್ಕೆ ಸಂಪೂರ್ಣವಾಗಿ ಬದ್ದನಾಗಿದ್ದೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, “ಇಲ್ಲಿವರೆಗೂ ರೈತರ ತಾಳ್ಮೆಯೇ ಗುತ್ತಿಗೆದಾರರಿಗೆ ಪ್ರೇರಣೆಯಾಗಿದೆ. ರೈತರು ತಮ್ಮ ಹಕ್ಕಿನ ಬಗ್ಗೆ ಸ್ಪಷ್ಟ ನಿಲುವು ತೋರದ ಕಾರಣ ಇಂದು ಪ್ರತಿಭಟನೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸಂಸದರು ರೈತರಿಗಾಗಿ ಕೋಟಿ ಕೋಟಿ ಅನುದಾನ ತಂದಿದ್ದಾರೆ. ಆ ಅನುದಾನವನ್ನು ಸಮರ್ಪಕವಾಗಿ ಬಳಸಿ ಯೋಜನೆಯನ್ನು ಉಳಿಸಿಕೊಳ್ಳಬೇಕು. ಪ್ರತಾಪ್ ಚಂದ್ರ ಶೆಟ್ಟಿಯವರ ಮುಂದಾಳತ್ವದಲ್ಲಿ ನಿರಂತರ ಹೋರಾಟ ನಡೆಸುವ ಮೂಲಕ ನಮ್ಮ ಹಕ್ಕಿನ ನೀರನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ರೈತ ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರವಣ್ ಸ್ವಾಗತಿಸಿದರು.
ರೋಹಿತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಎಚ್. ನಾಗಭೂಷಣ್ ಸಭಾಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸತೀಶ್ ಕಿಣಿ, ಶೇಖರ್ ಕುಲಾಲ್, ಮುಕಾಂಬು, ರಾಜು ಬೆಟ್ಟಿನ್ ಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯ ನಂತರ ಪ್ರತಿಭಟನಾಕಾರರು ಪಾದಯಾತ್ರೆ ಮೂಲಕ ವಾರಾಹಿ ನೀರಾವರಿ ಸಹಾಯಕ ಇಂಜಿನಿಯರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.





