ಅಮಾಸೆಬೈಲಿನಲ್ಲಿ 14 ಕೊರಗ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ: ಸಮಾಜ ಸೇವೆಯಲ್ಲಿ ಎಚ್. ಎಸ್. ಆರ್. ಶೆಟ್ಟಿಯವರ ಮಹತ್ವಾಕಾಂಕ್ಷಿ ಹೆಜ್ಜೆ – ಪೇಜಾವರ ಶ್ರೀ

ಅಮಾಸೆಬೈಲು, ಫೆ.26: ಉಡುಪಿ ಜಿಲ್ಲೆಯ ಅಮಾಸೆಬೈಲಿನಲ್ಲಿ ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆಗೆ ಭೂಮಿ ಪೂಜೆ ಕಾರ್ಯಕ್ರಮವು ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಸಮಾಜದ ಅತಿ ಕೆಳಸ್ತರದಲ್ಲಿ ಗುರುತಿಸಲ್ಪಟ್ಟಿರುವ ಕೊರಗ ಸಮುದಾಯದ ಜೀವನಮಟ್ಟವನ್ನು ಉತ್ತೇಜಿಸುವ ಉದ್ದೇಶದಿಂದ ಹಾಲಾಡಿಯ ಉದ್ಯಮಿ ಡಾ. ಹಾಲಾಡಿ ಶ್ರೀನಿವಾಸ ಶೆಟ್ಟಿಯವರು 14 ಕುಟುಂಬಗಳಿಗೆ ಮನೆ ನಿರ್ಮಿಸಿ ನೀಡುವ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ಶ್ರೀಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳು ಭೂಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಉಡುಪಿ ಶ್ರೀ ಕೃಷ್ಣನ ಪ್ರೇರಣೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಶ್ರೀನಿವಾಸ ಶೆಟ್ಟಿಯವರ ಸೇವಾಭಾವ ಪ್ರಶಂಸನೀಯವಾಗಿದ್ದು, ಈಗಾಗಲೇ 28 ಕೊರಗ ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಭಗವಂತನು ಅವರಿಗೆ ನೀಡಲಿ ಎಂದು ಆಶಿಸಿದರು.

ಶ್ರೀಯುತ ಎಚ್. ಎಸ್. ಆರ್. ಶೆಟ್ಟಿ ಸ್ವಾಗತ ಭಾಷಣ ಮಾಡಿ, 100 ಮನೆಗಳ ನಿರ್ಮಾಣ ಗುರಿ ಹೊಂದಿರುವುದಾಗಿ ತಿಳಿಸಿದರು. ಭಗವಂತನ ಕೃಪೆಯಿಂದ ಸಾವಿರ ಮನೆಗಳನ್ನು ನಿರ್ಮಿಸುವ ಆಶಯವೂ ಹೊಂದಿರುವುದಾಗಿ ಅವರು ಹೇಳಿದರು. ಸಮಾಜದಲ್ಲಿ ಇನ್ನೂ ಅನೇಕ ಕೊರಗ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದನ್ನು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಸದ ಶ್ರೀನಿವಾಸ ಪೂಜಾರಿ, ಕಮಲಶಿಲೆ ದೇವಸ್ಥಾನದ ಸಚ್ಚಿದಾನಂದ ಚಾತ್ರ, ಮಾದರ ಚೆನ್ನಯ್ಯ ಆಶ್ರಮದ ಟ್ರಸ್ಟೀ ದಾನಪ್ಪ, ಮುರುಳಿ ಕಡೇಕಾರ್, ಪಿಡಿಒ ಸ್ವಾಮೀನಾಥ್, ಕುಮಾರ್ ದಾಸ್, ನಾಗರಾಜ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪತ್ರಕರ್ತ ಸತೀಶ್ ಸಿದ್ದಾಪುರ ಕಾರ್ಯಕ್ರಮವನ್ನು ನಿರೂಪಿಸಿದರು.





