ಸಾಲಿಕೇರಿ ಬಸ್ ನಿಲ್ದಾಣದಲ್ಲಿ ನೂತನ ಪ್ರಯಾಣಿಕ ತಂಗುದಾಣ ಲೋಕಾರ್ಪಣೆ: ಸಾರ್ವಜನಿಕ ಸೌಲಭ್ಯಕ್ಕೆ ಕ್ರಷ್ಣ ಪ್ರಸಾದ್ ಕ್ಯಾಶ್ಯೂ ಕೊಡುಗೆ

ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಸಾಲಿಕೇರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅಗತ್ಯತೆಗಳನ್ನು ಮನಗಂಡು, ಶ್ರೀ ಕ್ರಷ್ಣ ಪ್ರಸಾದ್ ಕ್ಯಾಶ್ಯೂ ಸಂಸ್ಥೆಯ ವತಿಯಿಂದ ನೂತನ ತಂಗುದಾಣವನ್ನು ನಿರ್ಮಿಸಿ ಸೋಮವಾರ ಲೋಕಾರ್ಪಣೆ ಗೊಳಿಸಲಾಯಿತು.
ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮಾಲೀಕರಾದ ಸಂಪತ್ ಕುಮಾರ್ ಶೆಟ್ಟಿ, “ನಮ್ಮ ಉದ್ಯಮ ಕ್ಷೇತ್ರದಲ್ಲಿ 15 ವರ್ಷಗಳಲ್ಲಿ ಸಾಧಿಸಿದ್ದನ್ನು, ಸಾಲಿಕೇರಿಯ ದೈವಾ ದೇವರ ಅನುಗ್ರಹದಿಂದ ಕೇವಲ ಒಂದು ವರ್ಷದ ಅವಧಿಯಲ್ಲಿ ಸಾಧಿಸಲು ಸಾಧ್ಯವಾಯಿತು. ಈ ಊರು ನಮಗೆ ಬಹಳಷ್ಟು ಕೊಟ್ಟಿದ್ದು, ಆದ್ದರಿಂದ ಊರಿನ ಅಭಿವೃದ್ಧಿ ವಿಚಾರದಲ್ಲಿ ಸದಾ ಜನರೊಂದಿಗೆ ನಿಂತು ಕೆಲಸ ಮಾಡುವ ಬದ್ಧತೆ ನಮ್ಮದು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಮಾತನಾಡಿ, “ಕ್ರಷ್ಣ ಪ್ರಸಾದ್ ಕ್ಯಾಶ್ಯೂ
ಸಂಸ್ಥೆಯು ಸಾವಿರಾರು ಬಡ ವರ್ಗದ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಜೀವನೋಪಾಯಕ್ಕೆ ಭದ್ರತೆ ಒದಗಿಸುತ್ತಿದೆ. ಬಡವರ ಹೊಟ್ಟೆ ತುಂಬಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಈ ಸಂಸ್ಥೆಗೆ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಾ ಪ್ರೋತ್ಸಾಹ ಹಾಗೂ ಸಂಪೂರ್ಣ ಸಹಕಾರ ನೀಡಲಿದೆ” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದೇವಾನಂದ್ ನಾಯಕ್, GM ವಿದ್ಯಾ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ಚಂದ್ರ ಶೆಟ್ಟಿ, ಸಾಲಿಕೇರಿ ಶ್ರೀ ವೀರಭದ್ರ ದೇವಸ್ಥಾನದ ಧರ್ಮದರ್ಶಿಗಳಾದ ಸುರೇಶ್ ಶೆಟ್ಟಿಗಾರ್, ನಾಗೇಶ್, ಹರೀಶ್ ಶೆಟ್ಟಿ, ಉಮಾ ಬಾಯಿ ಅಶೋಕ್, ನಿರಂಜನ್ ಶೆಟ್ಟಿ, ನಾಗೇಶ್, ಮಹೇಶ್ ಶೆಟ್ಟಿಗಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶೇಖರ್ ಎಲ್ಲರನ್ನು ಸ್ವಾಗತಿಸಿ, ಅಂತ್ಯದಲ್ಲಿ ಧನ್ಯವಾದಗಳನ್ನು ಸಲ್ಲಿಸಿದರು.





