ರಸ್ತೆ ಅಪಘಾತಗಳಲ್ಲಿ ಯುವಕರ ಜೀವಹಾನಿ ಕಳವಳಕಾರಿ – ಪೋಷಕರು, ಯುವ ಸಮುದಾಯ ಜಾಗೃತರಾಗಲಿ: ಡಿವೈಎಸ್ಪಿ ಪ್ರಭು ಡಿ.ಟಿ.

ಸಾಲಿಗ್ರಾಮ: ರಸ್ತೆ ಅಪಘಾತಗಳಲ್ಲಿ ಯುವಕರು ಅತೀ ದೊಡ್ಡ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಅತ್ಯಂತ ನೋವಿನ ವಿಷಯವಾಗಿದ್ದು, ಈ ಬಗ್ಗೆ ಪೋಷಕರು ಹಾಗೂ ಯುವ ಸಮುದಾಯ ಹೆಚ್ಚು ಜಾಗೃತರಾಗಬೇಕಾದ ಅಗತ್ಯವಿದೆ ಎಂದು ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ. ಅವರು ಕಳವಳ ವ್ಯಕ್ತಪಡಿಸಿದರು.
ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಬುಧವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ–2026ರ ಅಂಗವಾಗಿ ಆಯೋಜಿಸಲಾದ ರಸ್ತೆ ಸುರಕ್ಷತೆ ಹಾಗೂ ಸೈಬರ್ ಕ್ರೈಮ್ ಅಪರಾಧಗಳ ಕುರಿತು ಜಾಗೃತಿ ಸಭೆ ಮತ್ತು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಾನೂನು ಅರಿವು, ಸಂಚಾರ ನಿಯಮಗಳ ಮಹತ್ವ ಹಾಗೂ ಸೈಬರ್ ಅಪರಾಧಗಳಿಂದ ದೂರ ಉಳಿಯುವ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಭವಿಷ್ಯದಲ್ಲಿ ಬಲಿಷ್ಠ ಹಾಗೂ ಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಯುವ ಸಮುದಾಯಕ್ಕೆ ಮಹತ್ತರ ಜವಾಬ್ದಾರಿ ಇದ್ದು, ಪೋಷಕರು ಮಕ್ಕಳಿಗೆ ವಾಹನ ನೀಡುವ ಮುನ್ನ ಕಡ್ಡಾಯವಾಗಿ ಚಾಲನಾ ಪರವಾನಿಗೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಜೊತೆಗೆ ಸಂಚಾರ ನಿಯಮಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್, ಬ್ರಹ್ಮಾವರ ಪೊಲೀಸ್ ವೃತ್ತದ ಕೋಟ ಪೊಲೀಸ್ ಠಾಣೆ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದು ಮನೆ ಕಣ್ಣಿನ ಆಸ್ಪತ್ರೆ ಇವರ ಜಂಟಿ ಆಶ್ರಯದಲ್ಲಿ, ಶ್ರೀ ಗುರು ನರಸಿಂಹ ದೇವಸ್ಥಾನ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಹಾಗೂ ಪಂಚವಾರ್ಣ ಸಂಘಟನೆ ಕೋಟ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಸಭಾಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ಕೆ.ಎಸ್. ಕಾರಂತ ಅವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕೋಟ–ಸಾಲಿಗ್ರಾಮ ಸಾಸ್ತಾನದ ಹಿರಿಯ ಆಟ ಚಾಲಕರಾದ ರತ್ನಾಕರ ಪೈ ಕೋಟ, ವೆಂಕಟೇಶ್ ಪೂಜಾರಿ ಕೋಟ, ನಾರಾಯಣ ಪೂಜಾರಿ ಸಾಲಿಗ್ರಾಮ ಹಾಗೂ ನಾರಾಯಣ ಗುಂಡ್ಮಿ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಿರೂರು ಮುದ್ದು ಮನೆ ಕಣ್ಣಿನ ಆಸ್ಪತ್ರೆಯ ಸಂಯೋಜಕ ಶಂಕರ್ ಶೆಟ್ಟಿ, ಕೂಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಯಶಶ್ರೀ, ಆರ್ಟಿಒ ಅಧಿಕಾರಿ ಲಕ್ಷ್ಮೀ ನಾರಾಯಣ ನಾಯಕ್, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಉಪಸ್ಥಿತರಿದ್ದರು.
ಪತ್ರಕರ್ತ ರವೀಂದ್ರ ಸ್ವಾಗತಿಸಿ, ಸುಜಾತ ಬಾಯರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೋಟ ಠಾಣೆಯ ಎಎಸ್ಐ ಜಾಭೆ ಗೌಡ ಧನ್ಯವಾದ ಸಲ್ಲಿಸಿದರು. ಎಎಸ್ಐ ಗೋಪಾಲ್ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕೋಟ ಮೂರ್ಕೈಯಿಂದ ಶ್ರೀ ಗುರು ನರಸಿಂಹ ದೇವಸ್ಥಾನವರೆಗೆ ಕಾಲ್ನಡಿಗೆ ಜಾಥ ನಡೆಯಿತು. ವಿವೇಕ ವಿದ್ಯಾ ಸಂಸ್ಥೆ, ಆಶಿತಾ ಶಿಕ್ಷಣ ಸಂಸ್ಥೆ, ಫಾರ್ಚುನ್ ಸೈನ್ಸ್ ಕಾಲೇಜು ಹಾಗೂ ಇಸಿಆರ್ ಕಾಲೇಜಿನ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದರು.





