
ಡೈಲಿ ವಾರ್ತೆ:JAN/16/2026
ಕಲುಷಿತ ಕುಡಿಯುವ ನೀರು ಪೂರೈಸುತ್ತಿದ್ದ ಹೊಂಬಾಡಿ ಮಂಡಾಡಿ ಗ್ರಾ. ಪಂ. – ಬೆಚ್ಚಿಬಿದ್ದ ಬಳಕೆದಾರರು!

ಕುಂದಾಪುರ| ಕಳೆದೆರಡು ವರ್ಷಗಳಿಂದ ಕುಡಿಯಲು ಕಲುಷಿತ ಗೊಂಡಿರುವ ನದಿಯ ನೀರನ್ನು ಗ್ರಾಮಸ್ತರಿಗೆ ಪೂರೈಸುತ್ತಿದ್ದ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯಿತಿನ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆಮಕ್ಕಿಯ ಯಡಾಡಿ ಹಾಗೂ ಮತ್ಯಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಗಂಭೀರವಾಗಿ ಮುಂದುವರಿದಿದೆ. ಪ್ರಧಾನಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಮೂರು ಕಡೆ ಓವರ್ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲಾಗಿತ್ತು. ಆದರೆ ಟ್ಯಾಂಕ್ಗಳಿಗೆ ನೀರು ಪೂರೈಸಲು ಗುಡ್ಡಟ್ಟು ಸೇತುವೆ ಸಮೀಪ ಅವೈಜ್ಞಾನಿಕ ವಾಗಿ ತೋಡಲಾದ ಬಾವಿಯಲ್ಲಿ ಹನಿ ನೀರು ಸಿಗದೇ, ಮೈ ಪರಚಿ ಕೊಂಡ ಅಧಿಕಾರಿಗಳ ದೃಷ್ಟಿ ಅನತಿ ದೂರದಲ್ಲಿ ಕಿರು ಅಣೆಕಟ್ಟು ಮೂಲಕ ಹೊಳೆಯಲ್ಲಿ ಸಂಗ್ರಹವಾಗಿದ್ದ ಮಲಿನ ನೀರಿನ ಮೇಲೆ ಹರಿದಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ್ ವತಿಯಿಂದ 5 ಹೆಚ್.ಪಿ ಮೋಟಾರ್ ಅನ್ನು ನೇರವಾಗಿ ಹೊಳೆಗೆ ಅಳವಡಿಸಿ, ಅದರಿಂದ ಬಾವಿಗೆ ನೀರು ತುಂಬಿಸಿ, ಬಳಿಕ 10 ಹೆಚ್.ಪಿ ಮೋಟಾರ್ ಮೂಲಕ ಟ್ಯಾಂಕ್ಗಳಿಗೆ ನೀರು ಪೂರೈಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ವಿಧಾನದಿಂದ ಕಳೆದ 1ರಿಂದ 2 ವರ್ಷಗಳ ಕಾಲ ಗ್ರಾಮಸ್ಥರಿಗೆ ಹೊಳೆಯ ಮಲೀನ ನೀರನ್ನೇ ಕುಡಿಯಲು ಪೂರೈಸಲಾಗಿದೆ ಎನ್ನುವುದು ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಗಮಿಸಿದ ಸಮಾಜ ಸೇವಕ ರವಿ ಮೊಗವೀರ ಗುಡ್ಡಟ್ಟು ಅವರು ಪಂಚಾಯತ್ ಸದಸ್ಯರ ಸಭೆಯಲ್ಲಿ ಅದೇ ನೀರನ್ನು ತಂದು ಪ್ರದರ್ಶಿಸಿ ಆಕ್ಷೇಪ ಎತ್ತಿದ್ದಾರೆ. ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಧೂಸೂಧನ್ ಅವರು ಎರಡು ದಿನಗಳ ಸಮಯಾವಕಾಶ ಕೇಳಿ, ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಕುಡಿಯುವ ನೀರು ನಮ್ಮ ಮೂಲಭೂತ ಹಕ್ಕು ಎಂಬುದನ್ನು ಉಲ್ಲೇಖಿಸಿದ ಗ್ರಾಮಸ್ಥರು, ಶಾಶ್ವತ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟಕ್ಕೆ ಸಾರ್ವಜನಿಕರ ಸಹಕಾರ ಮತ್ತು ಬೆಂಬಲ ಅಗತ್ಯವೆಂದು ಅವರು ಮನವಿ ಮಾಡಿದ್ದಾರೆ.





