ಕೋಟ “ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ: ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣದಲ್ಲಿ ನಾಲ್ವರಿಗೆ ನ್ಯಾಯಾಲಯದ ದಂಡ”

On: March 6, 2026 3:22 PM
Follow Us:

ಕೋಟ “ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ: ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣದಲ್ಲಿ ನಾಲ್ವರಿಗೆ ನ್ಯಾಯಾಲಯದ ದಂಡ”


ಕುಂದಾಪುರ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ದಾಖಲಾಗಿದ್ದ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಜಾನುವಾರುಗಳ ಮೇಲಿನ ಹಿಂಸೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಕುಂದಾಪುರದ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.

ದಿನಾಂಕ 31-05-2016 ರಂದು ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಆಗಿದ್ದ ಶ್ರೀಮತಿ ಸುಧಾ ಪ್ರಭು ಅವರು ಠಾಣಾ ಸಿಬ್ಬಂದಿಯವರೊಂದಿಗೆ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ, 01-06-2016 ರಂದು ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ತೆಕ್ಕಟ್ಟೆ ಕಡೆಯಿಂದ ಕೆದೂರು ಕಡೆಗೆ ರೌಂಡ್ಸ್ ಮಾಡುತ್ತಿದ್ದಾಗ ಕೆದೂರು ಗ್ರಾಮದ ಗೋಳಿಬೆಟ್ಟು ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ವಾಹನವನ್ನು ಗಮನಿಸಿದರು. ಟಾರ್ಚ್ ಬೆಳಕಿನಲ್ಲಿ ಪರಿಶೀಲಿಸಿದಾಗ ವಾಹನದ ಬಳಿ ಇದ್ದ 3 – 4 ಮಂದಿ ಪೊಲೀಸರು ಬರುತ್ತಿರುವುದನ್ನು ಕಂಡು ಸ್ಥಳದಿಂದ ಓಡಿ ಹೋಗಿರುವುದು ಕಂಡುಬಂದಿತು.

ಪಂಚರ ಸಮ್ಮುಖದಲ್ಲಿ ವಾಹನವನ್ನು ಪರಿಶೀಲಿಸಿದಾಗ ಅದು KA-19 AB 3144 ಸಂಖ್ಯೆಯ ವಾಹನವಾಗಿದ್ದು, ಅದರೊಳಗೆ 2 ಹೆಣ್ಣು ದನಗಳು, 2 ಸಣ್ಣ ಗಂಡು ಕರುಗಳು ಹಾಗೂ 2 ದೊಡ್ಡ ಗಂಡು ಕರುಗಳು ಸೇರಿ ಒಟ್ಟು 6 ಜಾನುವಾರುಗಳನ್ನು ತುಂಬಿಸಿ, ಅವುಗಳಿಗೆ ಉಸಿರಾಡಲು ತೊಂದರೆ ಉಂಟಾಗುವಂತೆ ಹಗ್ಗಗಳಿಂದ ಕಟ್ಟಿಹಾಕಿ ಹಿಂಸೆ ನೀಡುತ್ತಿರುವುದು ಪತ್ತೆಯಾಯಿತು.

ಆರೋಪಿಗಳು ಜಾನುವಾರುಗಳನ್ನು ಮಾಂಸಕ್ಕಾಗಿ ಮಂಗಳೂರಿಗೆ ಸಾಗಾಟ ಮಾಡಲು ಪ್ರಯತ್ನಿಸಿದ್ದಾಗಿ ಪೊಲೀಸರು ಶಂಕಿಸಿದ್ದಾರೆ. ಬಳಿಕ ಜಾನುವಾರುಗಳನ್ನು ರಕ್ಷಿಸಿ, ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಯಿತು.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅ.ಕ್ರ.208/2016 ಅಡಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ನಂತರ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಬ್ಬಾಳ ರಾಜ್ ಎಚ್.ಡಿ. ಅವರು ತನಿಖೆ ನಡೆಸಿ ಆರೋಪಿಗಳಾದ ನಾಗರಾಜ್ ನಾಯ್ಕ್, ಮಾಧವ ಮೊಗವೀರ, ಅನ್ವರ್ ಹಾಗೂ ಅಬುಬಕ್ಕರ್ ವಿರುದ್ಧ 12-06-2016 ರಂದು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕುಂದಾಪುರದ 1ನೇ ಎ.ಸಿ.ಜೆ. ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನಡೆದು, ಸರ್ಕಾರ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಉಮಾ ದಾಮೋದರ ನಾಯ್ಕ ಅವರು ವಾದ ಮಂಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಮತಿ ಶೃತಿ ಶ್ರೀ ಅವರು ಆರೋಪಿಗಳಿಗೆ ತಲಾ ₹1,025 ದಂಡ ವಿಧಿಸಿ ಆದೇಶ ನೀಡಿದ್ದಾರೆ.

Join WhatsApp

Join Now

Join Telegram

Join Now

Leave a Comment